ಕುಂದಾಪುರ ಮಿರರ್ ಸುದ್ದಿ…
ಕೋಟ: ಲಾಕ್ಡೌನ್ ಸಂದರ್ಭವನ್ನು ಸಮರ್ಪಕವಾಗಿ ಬಳಸಿಕೊಂಡು ರಚಿತಗೊಂಡ ಮೂರು ಯಕ್ಷಗಾನ ಪ್ರಸಂಗಗಳು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಲ್ಪಟ್ಟಿವೆ. ಇನ್ನಷ್ಟು ಯಕ್ಷಗಾನ ಪ್ರಸಂಗಗಳು ಇಲ್ಲಿ ಮೂಡಿ ಬರಲಿ ಎಂಬುವುದಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿದರು.
ಅವರು ಇತ್ತೀಚೆಗೆ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಇದರ ಸದಾನಂದ ರಂಗಮಂಟಪದಲ್ಲಿ ಸುಧಾ ಮಣೂರು ವಿರಚಿತ ಯಕ್ಷಗಾನ ಪ್ರಸಂಗ ಮದನ ಕೋಮಲೆ ಪ್ರಥಮ ಪ್ರದರ್ಶನವನ್ನು ಉಧ್ಘಾಟಿಸಿ ಮಾತನಾಡಿ. ಸುಧಾ ಮಣೂರು ಇವರನ್ನು ಕಲಾವಿದೆಯಾಗಿ ಹಾಗೂ ಸಂಘಟಕಿಯಾಗಿ ನೋಡಿದ್ದೆ.ಈಗ ಪ್ರಸಂಗಕರ್ತರೂ ಆಗಿದ್ದಾರೆ.ಅವರಿಗೂ ಹಾಗೂ ತಂಡಕ್ಕೂ ಶುಭವಾಗಲಿ ಎಂದು ಹಾರೈಸಿದರು.
ಮುಖ್ಯ ಅಭ್ಯಾಗತರಾದ ಐರೋಡಿ ರಾಜಶೇಖರ ಹೆಬ್ಬಾರ ಮಾತನಾಡುತ್ತಾ ಅದೆಷ್ಟೋ ಸಾವಿರ ಪ್ರಸಂಗಗಳು ಯಕ್ಷಗಾನ ಕ್ಷೇತ್ರದಲ್ಲಿ ಇವೆ; ಆದರೆ ಅವಕ್ಕಿನ್ನೂ ಸಾಹಿತ್ಯ ಕ್ಷೇತ್ರದಲ್ಲಾಗಲೀ ಸಾಹಿತ್ಯಿಕ ಸಭೆಗಳಲ್ಲಾಗಲಿ ಸಿಗಬೇಕಾದಷ್ಟು ಮಾನ್ಯತೆ ಸಿಗುತ್ತಿಲ್ಲ ಇನ್ನಾದರೂ ಕೊಡಿ ಎಂದು ಆಗ್ರಹಿಸಿದರು.
ಯಕ್ಷಮಹಿಳಾ ಬಳಗದ ಅಧ್ಯಕ್ಷೆ ಸುಶೀಲಾ ಸೋಮಶೇಖರ ಅಧ್ಯಕ್ಷತೆಯನ್ನು ವಹಿಸಿದ್ದರು.
ತಂಡದ ಸಂಚಾಲಕಿ ಹಾಗೂ ಪ್ರಸಂಗಕರ್ತೆ ಸುಧಾ ಮಣೂರು ಪ್ರಸ್ತಾಪಿಸಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ವಸಂತಿ ಉಮೇಶ್ ವಂದಿಸಿದರು. ಉಪನ್ಯಾಸಕಿ ಸದಸ್ಯೆ ಸುಶೀಲಾ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.
ತದನಂತರ ಯಕ್ಷಮಹಿಳಾ ಬಳಗ ಕೋಟ ಇವರಿಂದ ಯಕ್ಷಗಾನ “ಮದನ ಕೋಮಲೆ’ ಪ್ರದರ್ಶಿತಗೊಂಡಿತು.