ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಇಲ್ಲಿನ ಎಕ್ಸಲೆಂಟ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ಅಂಗಳದ ವಿದ್ಯಾಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಬಹಳ ಸಂಭ್ರಮ – ಸಡಗರದಿಂದ ಆಚರಿಸಲಾಯಿತು.
ಗಣಪತಿಯ ಗಣಹೋಮದೊಂದಿಗೆ ವಿದ್ವಾಂಸರಾದ ಗಣೇಶ ಭಟ್ಟರ ನೇತೃತ್ವದಲ್ಲಿ ಆರಂಭಗೊಂಡು ನಂತರ ಸಾಂಗವಾಗಿ ವರಮಹಾಲಕ್ಷ್ಮೀಯ ಮಹಾಪೂಜೆಯನ್ನು ವಿದ್ಯಾರ್ಥಿ- ಉಪನ್ಯಾಸಕರ ಭಜನೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ವಿದ್ವಾನ್ ಗಣೇಶ ಭಟ್ ಅವರ ನೇತೃತ್ವದಲ್ಲಿ ನಡೆದ ಈ ವರಮಹಾಲಕ್ಷ್ಮೀ ಮಹಾಪೂಜೆಯು ಈ ವಿದ್ಯಾಮಂದಿರದ ವಿದ್ಯಾಕೇಂದ್ರದಲ್ಲಿ ಶ್ರೀವಿದ್ಯಾಲಕ್ಷ್ಮೀಯ ಸರ್ವ ಅಲಂಕಾರದೊಂದಿಗೆ ಪುರೋಹಿತರ ಮಂತ್ರಘೋಷಗಳೊಂದಿಗೆ ಶಾಸ್ತ್ರ ಬದ್ಧವಾಗಿ ಪ್ರಾರಂಭವಾಯಿತು. ಈ ಸುಸಂದರ್ಭದಲ್ಲಿ ಸಂಸ್ಕೃತ ವಿದ್ವಾನರಾದ ಗಣೇಶಭಟ್ಟರು ವಿದ್ಯಾರ್ಥಿಗಳಿಗೆ ಈ ಪೂಜೆಯ ಮಹತ್ವವನ್ನು ಕಥೆಯ ಮೂಲಕ ಪ್ರಚುರಪಡಿಸುತ್ತಾ, ವಿಜ್ಞಾನಕ್ಕಿಂತಲೂ ಈ ನಮ್ಮ ಸನಾತನ ಧರ್ಮದ ಸಂಸ್ಕೃತಿಯೂ ಮಿಗಿಲಾಗಿದ್ದು, ವಿಜ್ಞಾನವೂ ಕಂಡಂತಹ “ಪ್ರಣಾಳ ಶಿಶು”ವಿನ ಸಂಶೋಧನೆಯು ಮಹಾಭಾರತದ ಯುಗದಲ್ಲಿ ಕೌರವರ ಸೃಷ್ಟಿಯಕಾಲದಲ್ಲಿ ಆಗಿದೆ ಎನ್ನುವ ಸುಂದರ ನಿದರ್ಶನಗಳೊಂದಿಗೆ ಸನಾತನ ಧರ್ಮದ ಮಹತ್ವ ಹಾಗೂ ವರಮಹಾಲಕ್ಷ್ಮೀ ಹಬ್ಬದ ಮಹತ್ವದ ಬಗ್ಗೆ ತಿಳಿಸಿದರು.
ಈ ಸುಂದರ ದೇವತಾಕಾರ್ಯಕ್ರಮದಲ್ಲಿ ಎಂ.ಎಂ.ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಂ.ಮಹೇಶ್ಹೆಗ್ಡೆಯವರು ಎಲ್ಲಾ ಪೂಜಾವಿಧಿಗಳಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದರು.
ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಹಾಗೂ ಹೈಸ್ಕೂಲಿನ ಮುಖ್ಯಶಿಕ್ಷಕಿಯಾದ ಸರೋಜಿನಿ ಆಚಾರ್ಯ ಉಪಸ್ಥಿತರಿದ್ದರು.
ದೇವತಾಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಕಾಲೇಜಿನ ಸರ್ವ ಉಪನ್ಯಾಸಕರು, ಸಹಶಿಕ್ಷಕರು ,ವಿದ್ಯಾರ್ಥಿ ವೃಂದದವರು, ಬೋಧಕೇತರ ಸಿಬ್ಬಂದಿಗಳು ಸಹ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಬಹಳ ಶೃದ್ಧಾಭಕ್ತಿಯಿಂದ ಶ್ರೀವರಮಹಾಲಕ್ಷ್ಮೀ ಪೂಜೆಯನ್ನು ಸಡಗರದಿಂದ ಆಚರಿಸಿದರು .