ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ ಇದರ ವಾರ್ಷಿಕ ಮಹಾಸಭೆ ನ.28 ರಂದು ಶಿವಕೃಪಾ ಕಲ್ಯಾಣ ಮಂಟಪ ಸಾಸ್ತಾನದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಪಿ. ಎಸ್ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘವು 2021ರ ಆರ್ಥಿಕ ವರ್ಷಾಂತ್ಯಕ್ಕೆ ಶೇ 97.18 ರಷ್ಟು ಸಾಲ ವಸೂಲಾತಿಗೊಂಡಿದ್ದು, ಲೆಕ್ಕಪರಿಶೋಧನೆ ವರ್ಗೀಕರಣ `ಎ’ ತರಗತಿಯಾಗಿದ್ದು ವರದಿ ಸಾಲಿನಲ್ಲಿ ಸಂಘ ರೂ. 88 ಲಕ್ಷಕ್ಕೂ ಮಿಕ್ಕಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 15 ಡಿವಿಡೆಂಡ್ ಘೋಷಿಸಲಾಯಿತು. ಸದಸ್ಯರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಲಾಯಿತು.ಈ ಸಂಧರ್ಭದಲ್ಲಿ ಸಂಘದ ಕಾರ್ಯ ವ್ಯಾಪ್ತಿಯ ಹಿರಿಯ ಕೃಷಿಕರಾದ ಎ. ಜಗದೀಶ ಕಾರಂತ ಐರೋಡಿ, ನಾರಾಯಣ ಮರಕಾಲ ಪಾಂಡೇಶ್ವರ , ಜುಲಿಯಸ್ ಎಂ. ರೋಚ್ ಮೂಡಹಡು , ಮೈಕಲ್ ಡಿಸೋಜ ಬಾಳೇಕುದ್ರು ಇವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು. ಹಾಗೂ ಸದಾಶಿವ ಪೂಜಾರಿ ಪಾಂಡೇಶ್ವರ ಇವರಿಗೆ ಆಧುನಿಕ ಕೃಷಿ ಪದ್ಧತಿಯ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2021 ರ ದ್ವಿತೀಯ ಪಿ.ಯು.ಸಿ ಮತ್ತು ಹತ್ತನೇ ತರಗತಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ಸುರೇಶ ಅಡಿಗ, ರಾಜಶೇಖರ ಪೂಜಾರಿ, ಡೆರಿಕ್ ಡಿಸೋಜಾ, ಗೋವಿಂದ ಪೂಜಾರಿ, ಸಂತೋಷ ಪೂಜಾರಿ, ಕಮಲ ಆಚಾರ್, ಗೀತಾ ಎಸ್ ಅಧಿಕಾರಿ, ಉದಯ ಮರಕಾಲ, ಶೇಖರ ಗದ್ದೆಮನೆ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಆನಂದ ಗಾಣಿಗ ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ಪೂಜಾರಿ ವರದಿ ವಾಚಿಸಿ, ನಿರ್ದೇಶಕರಾದ ರಮೇಶ ಕಾರಂತ ವಂದಿಸಿ , ಸಂಘದ ಸಿಬ್ಬಂದಿ ಸುರೇಶ ಪೂಜಾರಿ ಪ್ರಾರ್ಥನೆ ಮಾಡಿ ಕೇಶವ ಅಚಾರ್ ಕಾರ್ಯಕ್ರಮ ನಿರೂಪಿಸಿದರು.