ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಾಲೂಕಿನ ಹೊಂಬಾಡಿ-ಮಂಡಾಡಿ ಹಾಗೂ ಹಳ್ಳಾಡಿ-ಹರ್ಕಾಡಿ ಗ್ರಾಮ ವ್ಯಾಪ್ತಿಯ ವಿವಿಧೆಡೆಗಳಲ್ಲಿ ರಾತ್ರಿ ವೇಳೆ ಮನೆ ಬಾಗಿಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಚಿರತೆಗಳು ಮನೆ ಬಾಗಿಲಲ್ಲಿ ಸುತ್ತು ಹಾಕುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರಾಗಿದ್ದು, ಚಿರತೆ ಹಾವಳಿ ಹೆಚ್ಚಾಗಿರುವುದು ಮತ್ತು ರಾತ್ರಿ ವೇಳೆ ಮನೆಯಿಂದ ಹೊರಬರಲಾರದೆ ಚಡಪಡಿಸುವ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಯ ಮೊಳಹಳ್ಳಿ ಶಾಖೆಗೊಳಪಡುವ ಯಡಾಡಿ- ಮತ್ಯಾಡಿ ಗ್ರಾಮದ ಕರಿನಕಟ್ಟೆ ರಾಮದಾಸ ಭಂಡಾರಿ ಎನ್ನುವರ ಮನೆಯ ಮುಖ್ಯ ದ್ವಾರದವರೆಗೂ ಚಿರತೆ ಆಗಮಿಸಿದ್ದು ಮಂಗಳವಾರ ಮಧ್ಯರಾತ್ರಿ ವೇಳೆ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುಧವಾರ ಮುಂಜಾನೆ ವೇಳೆಯೂ ಕೂಡ ಇಲ್ಲಿಗೆ ಸಮೀಪದ ಹಳ್ಳಾಡಿ-ಹರ್ಕಾಡಿ ಗರಿಕೆಮಠ, ಸಿರಿಮಠ ಎಂಬಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಕುರುಚಲು ಕಾಡು ಪ್ರದೇಶವಾಗಿರುವ ಈ ಭಾಗದಲ್ಲಿ ನಿರಂತರವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಆಹರವನ್ನರಿಸಿ ಮನೆಬಾಗಿಲಿಗೆ ಬರುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಾಹಿತಿ ತಿಳಿದ ಮೊಳಹಳ್ಳಿ ಶಾಖೆಯ ಅರಣ್ಯಾಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಆಯಕಟ್ಟಿನ ಸ್ಥಳದಲ್ಲಿ ಬೋನು ಇರಿಸಿ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.