ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಯಶಸ್ಸು ಎಂಬ ಶೀತಲ ಬೆಳದಿಂಗಳನ್ನು ಪಡೆಯಲು ಪ್ರಯತ್ನವೆಂಬ ಚಂದಿರನನ್ನು ಸದಾ ಅರಳಿಸಬೇಕು ಎಂದು ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ರೀನಾ ಇವರು ಹೇಳಿದರು.
ಸದಾ ಪರಿಶ್ರಮ ಪ್ರಯತ್ನದಿಂದ ಕ್ರೀಡಾ ಸಾಧನೆಯ ಸರಮಾಲೆಯನ್ನೇ ಮುಡಿಗೇರಿಸಿದ ಗರಿಮೆ ಉಡುಪಿ ಜಿಲ್ಲೆಯ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲೂರಿನದ್ದು ಪ್ರತಿವರ್ಷ ಕ್ರೀಡೆಯ ವಿವಿಧ ವಿಭಾಗದಲ್ಲಿ ದೈಹಿಕ ಶಿಕ್ಷಕರಾದ ವೀರೇಂದ್ರ ಜೋಗಿ ಮಾರ್ಗದರ್ಶನದಲ್ಲಿ ಇಲ್ಲಿಯ ಮಕ್ಕಳು ಜಿಲ್ಲಾ, ವಿಭಾಗ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಕಾರಣ ಶಿಕ್ಷಣ ಫೌಂಡೇಶನ್ ಉಡುಪಿ ಜಿಲ್ಲೆಯ ಏಕೈಕ ಶಾಲೆಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರನ್ನು ಆಯ್ಕೆ ಮಾಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಕ್ರೀಡಾ ಸಮವಸ್ತ್ರ ಟ್ರ್ಯಾಕ್ ಪ್ಯಾಂಟ್ ಟ್ರ್ಯಾಕ್ ಸೂಟ್, ಶೂ ಗಳನ್ನು ಸುಮಾರು 105 ವಿದ್ಯಾರ್ಥಿನಿಯರಿಗೆ ಅಲ್ಲದೆ ಶಾಲೆಗೆ ಅಗತ್ಯವಿರುವ ಕ್ರೀಡಾ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮವು ಡಿ.17 ಮಂಗಳವಾರದಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ನಾಗೇಶ್ ನಾಯಕ್, ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ರೀನಾ, ತಾಲೂಕು ಸಂಯೋಜಕರಾದ ನಮಿತಾ ಎಸ್ಡಿಎಂಸಿ ಅಧ್ಯಕ್ಷರಾದ ದತ್ತಾತ್ರೇಯ ಭಟ್, ಉಪಾಧ್ಯಕ್ಷರಾದ ಚಂದ್ರಾವತಿ ಹಾಗೂ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಲೀನಾ ಕಾರ್ಡಿನ್ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ವೀರೇಂದ್ರ ಜೋಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ದಿನಕರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾ ವಂದಿಸಿದರು.