ಮಾನವ ಜನ್ಮವೇ ಶ್ರೇಷ್ಠವಾದದ್ದು – ಹರಿಹರಪುರ ಶ್ರೀ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮಾನವ ಜನ್ಮ ಎಲ್ಲಾ ಜೀವಿಗಳಿಗಿಂತ ಶ್ರೇಷ್ಢವಾದದ್ದು ಅದನ್ನು ಈ ಸಮಾಜದಲ್ಲಿ ಸದ್ವಿನಿಯೋಗ ಸಮರ್ಪಕವಾಗೊಳಿಸಿಕೊಳ್ಳಬೇಕು ಎಂದು ಹರಿಹರಪುರ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀಗಳು ನುಡಿದರು.
ಶನಿವಾರ ಕೋಟದ ಶ್ರೀ ಶಾಂತಮೂರ್ತಿ ಶನೀಶ್ವರ ದೇಗುಲದ ನೂತನ ಸಭಾಭವನ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ ಈ ಜಗತ್ತಿನಲ್ಲಿ ಜಾತಿಯ ಹೆಸರಿನಲ್ಲಿ ಮೇಲುಕೀಳು ಎಂಬ ಬೀಜ ಬಿತ್ತಲಾಗುತ್ತಿದೆ. ಆದರೆ ಜಾತ್ಯಾತೀತ ಎಂಬ ಹೆಸರಿನೊಂದಿಗೆ ಮನುಕುಲವನ್ನು ಒಡೆದು ಆಳುವ ಸ್ಥಿತಿ ನಿರ್ಮಾಣಗೊಂಡಿದೆ ನೈಜನಾಗಿ ತಿಳಿಯಬೇಕೆಂದರೆ ವಿಶ್ವದಲ್ಲಿ ಒಂದೇ ಜಾತಿ ಅದು ಮನುಜಜಾತಿ, ಜಾತಿ ವ್ಯವಸ್ಥೆ ಸೃಷ್ಠಿಸಿದ್ದೆ ನಮ್ಮ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಈ ಮೂರು ಜಾತಿಯ ಹಿಂದೆ ಜೋತಾಡುತ್ತಿದೆ, ಕೀಳರಿಮೆ ಸಲ್ಲ ಬದಲಾಗಿ ನಾವೆಲ್ಲ ಒಂದೇ ಎನ್ನುವ ಭಾವನೆ ಗಟ್ಟಿಯಾಗಬೇಕು, ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ಪರಂಪರೆ ದೊಡ್ಡ ಕೊಡುಗೆ ಶಾಂತಿ ಮಂತ್ರ ಪ್ರತಿಪಾದನೆ ನೀಡಿದೆ. ಮನಸ್ಸಿನಲ್ಲಿ ಶಾಂತಿ ಸಹನೆ, ನೆಮ್ಮದಿ ಕಾಣಬೇಕಾದರೆ ಅದನ್ನು ಪರಿಶುದ್ಧವಾಗಿರಿಸಿಕೊಳ್ಖಬೇಕು, ಪ್ರಾಚೀನವಾದ ನಮ್ಮ ಸನಾತನ ಧರ್ಮ ಇವೆಲ್ಲವನ್ನು ಧಾರೆ ಎರೆದಿದೆ ಎಂದರಲ್ಲದೆ ಪ್ರತಿ ವ್ಯಕ್ತಿಯನ್ನು ಪ್ರೀತಿಸುವ, ಸ್ನೇಹ ಸಂಬಂಧ ವೃದ್ಧಿಸುವ ಸಮಾಜ ನಿರ್ಮಾಣಗೊಳ್ಳಬೇಕು. ಭಗವಂತನಿಗೆ ಅತಿ ಹತ್ತಿರವಾಗುವ ಕಾರ್ಯವನ್ನು ಮಾಡಬೇಕು ಬದಕನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಜೀವಿಸುವುದನ್ನು ಕಲಿಯಬೇಕು. ಶುದ್ಧವಾದ ಭಕ್ತಿಯಲ್ಲಿ ಭಗವಂತನನ್ನು ಕಾಣಬಹುದು ಇದಕ್ಕೆ ಇಲ್ಲಿನ ಶನೀಶ್ವರ ದೇಗುಲವೇ ಸಾಕ್ಷಿ ಭಕ್ತಿಪೂರ್ವಕ ಸೇವೆ ಮಾಡಿದರೆ ಭಗವಂತ ಶಕ್ತಿ ಒಲಿಯುತ್ತದೆ ಎಂದು ನುಡಿದರು.
ಇದೇ ವೇಳೆ ಪಾಕಶಾಲೆಯನ್ನು ಉದ್ಯಮಿ ಡಾ.ಗೋವಿಂದಬಾಬು ಪೂಜಾರಿ ಉದ್ಘಾಟಿಸಿದರು. ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ದೇಗುಲದ ಧರ್ಮದರ್ಶಿ ಕೆ.ಭಾಸ್ಕರ್ ಸ್ವಾಮಿ ವಹಿಸಿದ್ದರು.
ಈ ಸಂದರ್ಭದಲ್ಲಿ ದೇಗುಲದ ಸಭಾಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಆನಂದ್ ಸಿ ಕುಂದರ್, ಡಾ.ಗೋವಿಂದಬಾಬು ಪೂಜಾರಿ, ದೇಗುಲದಲ್ಲಿ ಕಾರ್ಯನಿರ್ವಹಿಸುವ ಗೌರಿ ಅಜ್ಜಿ ಇವರುಗಳನ್ನು ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮುಜರಾಯಿ ಇಲಾಖೆಯ ಆಪ್ತ ಸಹಾಯಕ ಶಂಕರ್ ಶೆಟ್ಟಿ, ಜನತಾ ಸಂಸ್ಥೆ ನಿರ್ದೇಶಕ ಪ್ರಶಾಂತ್ ಎ ಕುಂದರ್, ಉದ್ಯಮಿ ಸತೀಶ್ ಶೆಟ್ಟಿ, ಕೆ.ಆರ್ ನಾಯಕ್ , ನೇರಳಕಟ್ಟೆ ಗಿರಿ ಕ್ಷೇತ್ರದ ಧರ್ಮದರ್ಶಿ ಶಂಕರ್ ಪೈ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಪ್ರಮುಖ ದಿನೇಶ್ ಗಾಣಿಗ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಂಜುನಾಥ್ ನಿರೂಪಿಸಿದರೆ, ದೇಗುಲದ ಪ್ರಧಾನ ಅರ್ಚಕ ಜಯರಾಜ ಸಾಲಿಯಾನ್ ವಂದಿಸಿದರು. ಶ್ರೀಕಾಂತ್ ಕದ್ರಿಕಟ್ಟು,ಪ್ರವೀಣ್ ಕುಂದರ್ ಸಹಕರಿಸಿದರು.