ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಿವೃತ್ತ ಡ್ರಾಯಿಂಗ್ ಮಾಸ್ಟರ್ ಜಿ . ಕೆ.ಗಂಗೊಳ್ಳಿ(87) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಪ್ರತಿಭಾವಂತ ಚಿತ್ರಕಾರರಾಗಿದ್ದ ಜಿ.ಕೆ.ಜಿ. (ಗೋಪಾಲ್ ಖಾರ್ವಿ ಗಂಗೊಳ್ಳಿ ) ಅವರ ‘ಹಳೇ ಮರವಂತೆ’ ತೈಲ ಚಿತ್ರ ಪ್ರಖ್ಯಾತಿ ಪಡೆದಿದೆ. ಹಲವಾರು ಮಂದಿಯ ಮನೆಯ ಗೋಡೆಯಲ್ಲಿ ಇವರ ಈ ತೈಲ ವರ್ಣ ಚಿತ್ರ ಶೋಭೆ ಅಂದು ರಾರಾಜಿಸುತ್ತಿತ್ತು. ಸರಳ ಸಜ್ಜನಿಕೆಯ ಸೌಮ್ಯ ಸ್ವಭಾವದ ಮೃದು ಭಾಷಿಗರಾದ ಇವರಿಗೆ ಚೆನ್ನೈ ಚಿತ್ರಕಲಾ ಶಾಲೆ ‘ಕಲಾ ಚಾಣಕ್ಯ’ ಪ್ರಶಸ್ತಿ ನೀಡಿ ಅಭಿನಂದಿಸಿತ್ತು. ಅತೀ ವೇಗವಾಗಿ ರೇಖೆಗಳ ಮೂಲಕ ಚಿತ್ರ ಬಿಡಿಸಿಸುವ ಕಲೆ ಮೈಗೂಡಿಡಿಸಿಕೊಂಡಿದ್ದ ಜಿ. ಕೆ. ಗಂಗೊಳ್ಳಿ ಅವರು ಪತ್ನಿ, ಒಂದು ಹೆಣ್ಣು, ಎರಡು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕುಂದಾಪುರ ತಾಲ್ಲೂಕಿನ ನಾವುಂದ ಸರಕಾರಿ ಶಾಲೆಯಲ್ಲಿ ಚಿತ್ರ ಕಲಾ ಶಿಕ್ಷಕರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಅವರ ಅಂದಿನ ಸಹೋದ್ಯೋಗಿ, ಆತ್ಮೀಯ ಮಿತ್ರ ಜನಾರ್ಧನ್ ಮರವಂತೆ ಮೊದಲಾದ ಹಲವಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.