ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದ್ದು, ಇದರಲ್ಲಿ ವಾಸ್ತವಾಂಶವನ್ನು ಮರೆಮಾಚಿ ರಾಜ್ಯಾದ್ಯಂತ ಇರುವ ಜೋಗಿ ಸಮಾಜದ ಜನ ಸಂಖ್ಯೆಯನ್ನು 337ರಂದು ಉಲ್ಲೇಖಿಸಲಾಗಿದೆ. ಸುಮಾರು 27 ಉಪಜಾತಿಗಳನ್ನು ಹೊಂದಿರುವ ಜೋಗಿಗಳಲ್ಲಿ ರಾಜ್ಯದಲ್ಲಿ ಸುಮಾರು 5ಲಕ್ಷಕ್ಕೂ ಮಿಕ್ಕಿ ಜನರು ಇದ್ದಾರೆ. ಹೀಗಿದ್ದೂ ವರದಿ ತಯಾರಿಸುವಾಗ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಮೀಕ್ಷೆ ಮಾಡದೆ ಮನಸೋ ಇಚ್ಛೆ ಸಂಖ್ಯೆ ಉಲ್ಲೇಖಿಸಿದ್ದಾರೆ. ಇದನ್ನು ಆಯೋಗದ ಅಧ್ಯಕ್ಷರು ಕೂಡಾ ಪರಾಮರ್ಶಿಸದೆ ಸಹಿ ಮಾಡಿರುವುದು ಖಂಡನಾರ್ಹ. ಇದು ಜೋಗಿ ಸಮುದಾಯಕ್ಕೆ ಅವಮಾನವಾಗಿ ಎಂದು ಕುಂದಾಪುರ ಜೋಗಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ರಮೇಶ್ ಎಚ್.ಎಸ್ ಜೋಗಿ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 1931ರ ಜನಗಣತಿಯ ಪ್ರಕಾರ ಜಾತಿಗಳ ಮತ್ತು ಬುಡಕಟ್ಟುಗಳ ಜನಸಂಖ್ಯೆ ಜಾತಿ ಬುಡಕಟ್ಟು ಅಥವಾ ಜನಾಂಗ ಮೈಸೂರು ರಾಜ್ಯ ಸೇರಿದಂತೆ ಜಾತಿ ಮತ್ತು ಸದಸ್ಯ ಕೇಂದ್ರ ಬೆಂಗಳೂರು ಅಂದಿನ ಕುಂಚಿಟಿಗ ಜಾತಿಯ ಜನಸಂಖ್ಯೆ ಒಟ್ಟು 1,16,564 ಇದೆ. ಆದರೆ ಈಗ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರಾಗಿರುವ ಆಯೋಗ ಸಲ್ಲಿಸಿರುವ ವರದಿಯಲ್ಲಿ ಜೋಗಿ ಸಮಾಜದ ಜನಸಂಖ್ಯೆ 337 ಎಂದು ಉಲ್ಲೇಖಿಸಿರುವುದು ವಿಪರ್ಯಾಸ. ಈ ಬಗ್ಗೆ ಸಮಸ್ತ ಜೋಗಿ ಸಮಾಜದ ಜನತೆ ಸೇರಿ ಏ.23 ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಚಿತ್ರದುರ್ಗ ಜಿಲ್ಲೆ ಜೋಗಿ ಸಮಾಜದ ಅಧ್ಯಕ್ಷರಾದ ಡಾ.ಜಗದೀಶ ಜೋಗಿ ಮಾತನಾಡಿ, ಜೋಗಿ ಸಮಾಜದ ನಿಜ ಜನಸಂಖ್ಯೆಯನ್ನು ಮರೆ ಮಾಚಿರುವ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆಯೋಗದ ಅಧ್ಯಕ್ಷರ ಊರಿನ ಸುತ್ತಮುತ್ತಲೇ 15ಸಾವಿರಕ್ಕೂ ಮಿಕ್ಕಿ ಜೋಗಿ ಸಮುದಾಯದವರಿದ್ದಾರೆ. ಈ ವರದಿಯನ್ನು ಕೂಡಲೇ ರದ್ದು ಮಾಡಬೇಕು ಎಂದರು.
ಬೆಂಗಳೂರು ನಾಥ ಪಂಥ ಮಹಾಸಭಾದ ಅಧ್ಯಕ್ಷರಾದ ಕುಮಾರ ಸ್ವಾಮಿ ಮಾತನಾಡಿ, ಕಾಂತರಾಜ ಆಯೋಗ ಮಾಹಿತಿ ಸಂಗ್ರಹಿಸಿತ್ತು. ಬಳಿಕ ಅಧ್ಯಕ್ಷರಾಗಿ ಜಯಪ್ರಕಾಶ ಹೆಗ್ಡೆ ಅವರನ್ನು ನೇಮಕ ಮಾಡಲಾಗಿತ್ತು. ಈಗ ವರದಿ ಬಿಡುಗಡೆ ಮಾಡಲಾಗಿದೆ. ಈ ವರದಿಯಿಂದ ಜೋಗಿ ಸಮಾಜಕ್ಕೆ ದೊಡ್ಡ ಅಘಾತವಾಗಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಸ್ವೀಕರಿಸಬೇಕು. ಅಧಿಕಾರಿಗಳು ಸಿದ್ಧಪಡಿಸಿಕೊಟ್ಟ ವರದಿಯನ್ನು ಪರಿಶೀಲಿಸದೆ ಸಹಿ ಮಾಡಿರುವುದು ಸರಿಯಲ್ಲ. ಕರಾವಳಿ ಭಾಗದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಜೋಗಿ ಸಮುದಾಯದ ಜನರು ಇರುವುದು ಜಯಪ್ರಕಾಶ್ ಹೆಗ್ಡೆ ಅವರಿಗೆ ಗೊತ್ತಾಗಲಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘ ನಿ, ಕೋಟೇಶ್ವರ ಇದರ ಅಧ್ಯಕ್ಷರಾದ ಶೇಖರ ಜೋಗಿ , ಜೋಗಿ ಸಮಾಜ ಸೇವಾ ಸಂಘ ಕುಂದಾಪುರ ಇದರ ಗೌರವಾಧ್ಯಕ್ಷರಾದ ಪಾಂಡುರಂಗ ಜೋಗಿ, ರಾಜಶೇಖರ ಜೋಗಿ ಬೆಂಗಳೂರು, ಸತ್ಯನಾರಾಯಣ ಜೋಗಿ ಹಂಗಳೂರು, ಚಂದ್ರ ಜೋಗಿ ಶಾನ್ಕಟ್ಟು, ಅಮೃತ್ ಜೋಗಿ ಬೆಂಗಳೂರು ಉಪಸ್ಥಿತರಿದ್ದರು.