ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಾರಕೂರು ಗ್ರಾಮಪಂಚಾಯತ್ ಹಾಗೂ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ನಾಗರಮಠ ಹಾಗೂ ಹೊಸಾಳ ಗ್ರಾಮದ ವೆಂಟೇಡ್ ಡ್ಯಾಮ್ ಬಳಿ ಮರಳುಗಾರಿಕೆ ನಡೆಸುವ ಸಂಬಂಧಿಸಿದಂತೆ ಸಾಕಷ್ಟು ಸಮಯಗಳಿಂದ ಸ್ಥಳೀಯರು ಆಕ್ಷೇಪಿಸಿ ಪ್ರತಿಭಟಿಸಿ ಶಾಸಕರಿಗೆ ಮನವಿ ಸಲ್ಲಿಸಿದ ಹಿನ್ನಲ್ಲೆಯಲ್ಲಿ ಸ್ಥಳಕ್ಕೆ ಮಂಗಳವಾರ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಗಣಿ ಇಲಾಖೆ ಗುರುತುಪಡಿಸಿರುವ ಸ್ಥಳ ಮರಳುಗಾರಿಕೆಗೆ ಯೋಗ್ಯವಲ್ಲ ಈಗಾಗಲೇ ಕಿಂಡಿ ಅಣೆಕಟ್ಟು ಭಾಗದಲ್ಲಿ ಸಾಕಷ್ಟು ಕೃಷಿ ಕುಸಿದು ಹಾನಿಗೊಂಡಿರುವುದು ಶಾಸಕರಿಗೆ ಮನವರಿಕೆ ಮಾಡಿದ ಸ್ಥಳೀಯ ಗ್ರಾಮಸ್ಥರು ಮರಳುಗಾರಿಕೆಯ ಸ್ಟಾಕ್ ಯಾರ್ಡಗೆ ಕೃಷಿ ಭೂಮಿ ಬಳಕೆ ಮಾಡಿರುವುದಕ್ಕೆ ಶಾಸಕರ ಸಮ್ಮುಖದಲ್ಲಿ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಇಲ್ಲಿನ ರಸ್ತೆಗಳು ಅಗಲ ಕಿರಿದಾಗಿದ್ದ ಬಗ್ಗೆ ಶಾಸಕರ ಪರಿಗಣನೆಗೆ ತಂದರು. ಈ ರೀತಿ ಮರಳುಗಾರಿಕೆಯನ್ನು ಗ್ರಾಮಸ್ಥರು ಶಾಸಕರ ಸಮ್ಮುಖ ವಿರೋಧ ವ್ಯಕ್ತಪಡಿಸಿದರು.
ಶಾಸಕರಿಂದ ಸ್ಥಳದಲ್ಲೆ ಅಧಿಕಾರಿಗಳನ್ನು ದೂರವಾಣಿಯ ಮೂಲಕ ತರಾಟೆ
ಈ ಎಲ್ಲಾ ಮಾಹಿತಿಯನ್ನು ಪಡೆದ ಶಾಸಕರು ಸ್ಥಳದಲ್ಲೆ ದೂರವಾಣಿಯ ಮೂಲಕ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರ ವಿರೋಧದ ನಡುವೆ ಮರಳುಗಾರಿಕೆ ನಡೆದಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಮರಳುಗಾರಿಕೆ ನಡೆಸುವ ಸ್ಥಳಗಳ ಗುರುತು ಮಾಡಲು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿ ಎಂದರು.
ಈ ವೇಳೆ ಬಾರಕೂರು ಗ್ರಾಮಪಂಚಾಯತ್ ಸದಸ್ಯ ಪ್ರವೀಣ್ ನಾಗರಮಠ,ವಡ್ಡರ್ಸೆ ಗ್ರಾ.ಪಂ ಸದಸ್ಯ ಕುಶಲ ಶೆಟ್ಟಿ, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.