ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕೋಟೇಶ್ವರದ ಮಹತೊಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆ 7.40ರ ಕುಂಭ ಲಗ್ನ ಸುಮುಹೂರ್ತದಲ್ಲಿ ನೂತನ ಧ್ವಜ ಸ್ಥಂಭ ವನ್ನು ಪ್ರತಿಷ್ಠಾಪಿಸಲಾಯಿತು. ತಂತ್ರಿ ಪ್ರಸನ್ನ ಕುಮಾರ ಐತಾಳರು ಮತ್ತು ಸಹ ಪುರೋಹಿತರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ – ರುಕ್ಮಿಣಿ ದಂಪತಿ ಕರ್ತೃವಾಗಿ ಸಂಕಲ್ಪ, ಪೂಜೆ ನೆರವೇರಿಸಿದರು. ಧ್ವಜ ಸ್ಥಂಭ ಪ್ರತಿಸ್ಥಾಪನೆಯ ನಂತರ ದೇವತಾ ಪ್ರಾರ್ಥನೆ ನೆರವೇರಿಸಿ, ನೂತನ ಧ್ವಜ ಸ್ಥ0ಭದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತರು ಸುದೀರ್ಘ ಕಾಲದಿಂದಲೂ ಯೋಜಿಸಿದ ಈ ಶುಭ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿದ ಬಗ್ಗೆ ಕೃತಕೃತ್ಯತೆ ಹೊಂದಿ ಭಾವುಕರಾದರು. 2019ರ ಆಗಸ್ಟ್ ನಲ್ಲೇ ಸುಳ್ಯದಿಂದ ಸೂಕ್ತ ಮರವನ್ನು ತಂದು, ಎಲ್ಲ ಪೂರ್ವ ಸಂಸ್ಕಾರಗಳನ್ನೂ ನೆರವೇರಿಸಿದ್ದರೂ ಕೋವಿಡ್ ನಿಂದಾಗಿ ಪ್ರತಿಷ್ಠಾಪಿಸಲು ತಡೆಯಾಗಿತ್ತು. ಆಗಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ ಮತ್ತು ಸದಸ್ಯರು, ಶಿಲ್ಪಿ ರಾಜಗೋಪಾಲ ಆಚಾರ್ಯರು ಮತ್ತು ತಂಡ, ಸಹಸ್ರಾರು ಕರಸೇವಕರು ಹಗಲಿರುಳು ಶ್ರಮಿಸಿದ್ದರು. ಅವರೆಲ್ಲರ ಶ್ರಮ ಫಲನೀಡಿದಂತೆ ಇಂದು ಕಣ್ ಮುಂದೆ ಭವ್ಯ ಧ್ವಜ ಸ್ಥಂಭ ತಾಮ್ರಾಚ್ಚಾದನೆಗೊಂಡು ಮಿರುಗುಟ್ಟುತ್ತಾ ನಿಂತು, ಎಲ್ಲ ವಿಧಿವಿಧಾನಗಳೂ ಶಾಸ್ತ್ರೋಕ್ತವಾಗಿ ನೆರವೇರಿದಾಗ ಶ್ರಮಿಸಿದ್ದ ಎಲ್ಲರಲ್ಲೂ ಧನ್ಯತಾಭಾವ ಮೂಡಿತು. 67 ವರ್ಷಗಳ ನಂತರ ನಡೆದ ಈ ಅವಿಸ್ಮರಣೀಯ ಕಾರ್ಯ ಎಲ್ಲರ ಶ್ರಮವನ್ನೂ ಮರೆಸಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ – ವಿಶಾಲಾಕ್ಷಿ ಶೆಟ್ಟಿ ದಂಪತಿ, ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಮೂರೂ ಸಮಿತಿಗಳವರು, ಜಿ ಎಸ್ ಬಿ ಹಾಗೂ ಇನ್ನಿತರ ಸಮುದಾಯದ ಪ್ರಮುಖರು, ಊರ ಹಿರಿಯರು, ವಿವಿಧ ಉಪಸಮಿತಿಗಳವರು, ಭಗವದ್ಭಕ್ತರು ಈ ವೇಳೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವದಂಗವಾಗಿ ದೇವಳವನ್ನು ವಿವಿಧ ಪುಷ್ಪಗಳು ಮತ್ತು ವರ್ಣಮಯ ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.
ನಂತರ ನೂತನ ಧ್ವಜ ಸ್ಥಂಭ ದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.