ಕುಂದಾಪುರ ಮಿರರ್ ಸುದ್ದಿ…
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ , ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ವತಿಯಿಂದ ಕೊಡಮಾಡುವ ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ದಿ.ಕೋಟ ವೈಕುಂಠ ದತ್ತಿ ಪುರಸ್ಕಾರಕ್ಕೆ ಬಡಗುತಿಟ್ಟಿನ ಉದಯೋನ್ಮುಖ ಭಾಗವತ ಉದಯ ಕುಮಾರ್ ಹೊಸಾಳ ಆಯ್ಕೆಯಾಗಿದ್ದಾರೆ.
ಬಡಗುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಸಾಂಪ್ರದಾಯಿಕ ರಂಗ ಸಂವಿಧಾನಕ್ಕೆ ಸುಸ್ವರ ಶ್ರೀಮಂತಿಕೆಯ ರಾಗ ಮಾಧುರ್ಯದ ಬೆಸುಗೆಯಾದ ಗಾನ ವಿಧಾನವನ್ನು ಸಂಯುಕ್ತಗೊಳಿಸಿ ಪ್ರಬುದ್ಧ ಭಾಗವತರಾಗಿ ರೂಪುಗೊಂಡವರು ಉದಯ ಕುಮಾರ್ ಹೊಸಾಳ ಅವರು. ಖಚಿತ ಲಯಗಾರಿಕೆ, ತಾಳದ ಗಟ್ಟಿತನ, ಉತ್ತಮ ಪೌರಣಿಕ ಜ್ಞಾನ, ಫ್ರೌಡ ರಂಗ ತಂತ್ರಗಳನ್ನು ತನ್ನ ಭಾಗವತಿಕೆಯಲ್ಲಿ ನಿಚ್ಚಳವಾಗಿ ಕಾಣಿಸುವ ಇವರು ಬಡಗುತಿಟ್ಟಿನ ಪ್ರಸಿದ್ಧ ಭಾಗವತರಲ್ಲಿ ಒಬ್ಬರು.
ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಫೆಬ್ರವರಿ 27 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.