ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಬೈಂದೂರಿನ ಕಲಾ ಸಂಸ್ಥೆ ಸುರಭಿ ರಿ. ಬೈಂದೂರು ಆಶ್ರಯದಲ್ಲಿ `4 ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ – ರಂಗ ಸುರಭಿ 2022′ ಮಾರ್ಚ್ 25 ರಿಂದ 28 ರವರೆಗೆ ಪ್ರತಿದಿನ ಸಂಜೆ ಗಂಟೆ 6ಕ್ಕೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.
ನಾಟಕೋತ್ಸವದಲ್ಲಿ ಮಾರ್ಚ್ 25ರ ಶುಕ್ರವಾರ ಥಿಯೇಟರ್ ಕಲೆಕ್ಟಿವ್ ಬೆಂಗಳೂರು ಅಭಿನಯದ, ಸ್ಲಾವೋಮಿರ್ ಮ್ರೋಜೆಕ್ರ ಚಾರ್ಲಿ ಆಧಾರಿತ ನಾಟಕ ‘ಕೋವಿಗೊಂದು ಕನ್ನಡಕ’ ನಾಟಕ (ರೂಪಾಂತರ ಮತ್ತು ನಿರ್ದೇಶನ: ವೆಂಕಟೇಶ್ ಪ್ರಸಾದ್) ಪ್ರದರ್ಶನಗೊಳ್ಳಲಿದೆ. ಮಾರ್ಚ್ 26ರ ಶನಿವಾರ ನಂದಗೋಕುಲ ಮಂಗಳೂರು ಅಭಿನಯದ ನಾಟಕ `ಉಡಿಯೊಳಗಣ ಕಿಚ್ಚು’ (ರಂಗಪಠ್ಯ ಮತ್ತು ನಿರ್ದೇಶನ : ಪ್ರಶಾಂತ್ ಉದ್ಯಾವರ) ಪ್ರದರ್ಶನ, ಮಾರ್ಚ್ 27ರ ಭಾನುವಾರ ಕೆ.ವಿ. ಸುಬ್ಬಣ್ಣ ರಂಗಸಮೂಹ ಹೆಗ್ಗೋಡು ಅಭಿನಯದ ಕಂಪೆನಿ ನಾಟಕ `ದೇವದಾಸಿ’ (ರಚನೆ: ಕೆ. ಹಿರಿಯಣ್ಣಯ್ಯ, ವಿನ್ಯಾಸ/ಸಂಗೀತ/ನಿರ್ದೇಶನ: ಡಾ| ಪಂಡಿತ ಕವಿ ಗವಾಯಿಗಳ ಶಿಷ್ಯ ಪರಶುರಾಮ ವಿ. ಗುಡ್ಡಳ್ಳಿ) ಪ್ರದರ್ಶನಗೊಳ್ಳಲಿದ್ದು, ಮಾರ್ಚ್ 28ರ ಸೋಮವಾರ ಸಂಗಮ ಕಲಾವಿದೆರ್ ಮಣಿಪಾಲ ರಿ. ಅಭಿನಯದ ನಾಟಕ `ಮೂಕ ನರ್ತಕ’ (ರಚನೆ: ಅಸೀಫ್ ಕರೀಮ್ ಭೋಯ್, ಪರಿಷ್ಕರಣೆ/ಅನುವಾದ: ಕೆ. ಆರ್. ಓಂಕಾರ್, ವಿನ್ಯಾಸ/ನಿರ್ದೇಶನ: ಭುವನ್ ಮಣಿಪಾಲ್) ಪ್ರದರ್ಶನಗೊಳ್ಳಲಿದೆ.
ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ನಾಟಕೋತ್ಸವ ಉದ್ಘಾಟಿಸಲಿದ್ದು, ಈ ವೇಳೆ ಕುಂದಾಪ್ರ ಕನ್ನಡ ಹಾಸ್ಯ ಕಲಾವಿದ ಮನು ಹಂದಾಡಿ ಅವರು ಸೇರಿದಂತೆ ನಾಲ್ಕು ದಿನಗಳ ಕಾಲ ವಿವಿಧ ಅಥಿತಿ ಗಣ್ಯರು ಉಪಸ್ಥಿತರಿರಲಿದ್ದಾರೆ. ರಂಗಭೂಮಿ ಹಾಗೂ ಕಲಾ ಕ್ಷೇತ್ರದ ಸಾಧಕರಾದ ಚಂದ್ರಕಾಂತ ಕೊಡಪಾಡಿ, ಯಾಕೂಬ್ ಖಾದರ್ ಗುಲ್ವಾಡಿ, ತ್ರಿವಿಕ್ರಮ ರಾವ್ ಉಪ್ಪುಂದ, ರವೀಂದ್ರ ಕಿಣಿ ಕಂಚಿಕಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.