ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಹದ ಆಹಾರ ಪದ್ಧತಿಯಲ್ಲಿ ನಿಯಮ ಪಾಲನೆ ಅತಿ ಅಗತ್ಯ. ಋತುಮಾನಗಳ ಬದಲಾವಣೆಗೆ ತಕ್ಕಂತೆ ದೈನಂದಿನ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರಿಂದ ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ತೆಕ್ಕಟ್ಟೆಯ ಗೋಸ್ವಾಲ್ ಮೈತ್ರೇಯ ಆಯುರ್ವೇದ ಆಶ್ರಮದ ಸಂಸ್ಥಾಪಕ ಡಾ.ತನ್ಮಯ್ ಗೋಸ್ವಾಮಿ ಹೇಳಿದರು.
ಕೋಟೇಶ್ವರ ಸಮೀಪದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ನಡೆದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ‘ಸಸ್ಯಾಮೃತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Video:
ಆಯುರ್ವೇದ ಹಾಗೂ ಚರಕ ಸಂಹಿತೆಯಲ್ಲಿ ಆಹಾರ ಪದ್ದತಿ ಹಾಗೂ ಸಸ್ಯಾಮೃತಗಳ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಲಾಗಿದೆ. ನಮ್ಮ ದೇಹಕ್ಕೆ ಅಗತ್ಯವಾಗಿರುವ ಸ್ನೇಹಮಯಿ ಆಹಾರ ಪದಾರ್ಥಗಳ ಬಳಕೆ ಈ ದಿನಗಳಿಗೆ ಅತ್ಯಂತ ಅಗತ್ಯವಾಗಿದೆ. ಕಲಿಯುವಿಕೆಯ ಸಿದ್ದಾಂತಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಂಡಾಗ ಮಾತ್ರ ವೈದ್ಯಕೀಯ ವೃತ್ತಿಗಳು ನಮಗೆ ಸಂತೃಪ್ತಿಯನ್ನು ತಂದುಕೊಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ನ ಸಂಸ್ಥಾಪಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು, ಕರ್ಕಾಟಕ ಹಾಗೂ ಸಿಂಹ ಮಾಸದಲ್ಲಿ ಶ್ರಮಿಕ ವರ್ಗದವರಿಗೆ ಕೆಲಸ ಕಡಿಮೆ ಇರುವುದರಿಂದ ದೇಹದ ಜಡತ್ವ ಕಾಯಿಲೆಗಳಿಗೆ ಕಾರಣವಾಗಬಹುದು ಎನ್ನುವ ಕಾರಣಕ್ಕಾಗಿ ನಮ್ಮ ಹಿರಿಕರು ಹಾಲೆ ಮರದ ಕೆತ್ತೆ (ತೊಗಟೆ)ಯಿಂದ ಕಷಾಯ ಮಾಡಿ ಕುಡಿಯುವುದನ್ನು ರೂಢಿಯಾಗಿರಿಸಿಕೊಂಡಿದ್ದರು. ಅಡ್ಡ ಪರಿಣಾಮಗಳಲ್ಲದೆ ಆಯುರ್ವೇದ ಬಳಕೆಯಿಂದ ಆರೋಗ್ಯ ಹಾಗೂ ಆಯಸ್ಸು ವರ್ಧನೆಯಾಗುತ್ತದೆ ಎನ್ನುವ ಸಂಗತಿ ಎಷ್ಟೋ ಜನರಿಗೆ ಗೊತ್ತಿಲ್ಲ. ಎಂದರು.
ಕುಂಭಾಶಿ ಸದ್ಗುರು ಆಯುರ್ವೇದಾಶ್ರಮದ ಡಾ. ಶ್ರೀಕಾಂತ ಆಚಾರ್ಯ, ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ನ ಜಂಟಿ ಆಡಳಿತ ನಿರ್ದೇಶಕರಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ ಹಾಗೂ ಅನುಪಮಾ ಎಸ್ ಶೆಟ್ಟಿ ಇದ್ದರು.
ಅನುಪಮಾ ಎಸ್ ಶೆಟ್ಟಿ ಸ್ವಾಗತಿಸಿದರು. ಗುರುಕುಲ ಪಬ್ಲಿಕ್ ಸ್ಕೂಲ್ನ ಶಿಕ್ಷಕಿರಾದ ವಿಶಾಲ ಶೆಟ್ಟಿ ನಿರೂಪಿಸಿದರು. ಶಾಂತ ವಂದಿಸಿದರು.