ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರ ಎಲ್ಲದರಲ್ಲಿಯೂ ಹೆಸರುವಾಸಿ. ಶಿಕ್ಷಣದಲ್ಲಿ ಎತ್ತಿದ ಕೈ. ಮೀನುಗಾರಿಕೆಯಲ್ಲಿಯೂ ಮುಂಚೂಣಿ. ಸಾಧನೆಯಲ್ಲಿಯೂ ಮುಂದೆ ಅದರಂತೆ ಧಾರ್ಮಿಕ ಕ್ಷೇತ್ರಗಳಿಗೂ ಹೆಸರುವಾಸಿ.
Video:
ಕುಂದಾಪುರದಲ್ಲಿ ಬಹಳಅಪರೂಪವೆಂಬಂತಿರುವುದೇ ಈ ಬಯಲು ಗಣಪತಿ ದೇವಸ್ಥಾನ. ತಾಲೂಕಿನ ಕೊಡ್ಲಾಡಿ ಗ್ರಾಮದ ಅತ್ಯಂತ ಎತ್ತರದ ಗುಡ್ಡದಲ್ಲಿ ನೆಲಮಟ್ಟದಿಂದ ಸುಮಾರು ಒಂದು ಸಾವಿರ ಮೀಟರ್ ಎತ್ತರದಲ್ಲಿ ರಾರಾಜಿಸುತ್ತಿದ್ದಾನೆ ಈ ಬಯಲುವಾಸಿ ಗಣೇಶ. ಬುಧವಾರದಂದು ಇಲ್ಲಿ ಸಂಭ್ರಮದ ಗಣೇಶೋತ್ಸವ ನಡೆಯಿತು.
ಏನಿದು ಬಯಲು ಗಣಪತಿ ದೇವಸ್ಥಾನ:
ಅನಾದಿ ಕಾಲದಿಂದಲೂ ಋಷಿಮುನಿಗಳ ತಪೋಶಕ್ತಿಯಿಂದ ಹನ್ನೆರಡು ಇಂಚು ವ್ಯಾಸದ ಅತೀ ಚಿಕ್ಕ ಬಾವಿಯ ಮೂಲಕ ಉದ್ಭವಿಸಿದ ಗಣಪತಿ ಇಲ್ಲಿ ನೆಲೆಯಾಗಿದ್ದಾನೆ. ಮಂದಿರವೇ ಇಲ್ಲದ ಗಣಪತಿ ಬರಬರುತ್ತಾ ಬಯಲು ಗಣಪತಿ ಎಂದು ಖ್ಯಾತನಾಗುತ್ತಾನೆ.
ಬಳಿಕ ಅಜೀರ್ಣಾವಸ್ಥೆಯಲ್ಲಿದ್ದ ಗಣೇಶನ ನೆಲೆಯನ್ನು ಜೀರ್ಣೋದ್ದಾರಗೊಳಿಸಿ ಮಂದಿರ ನಿರ್ಮಿಸಬೇಕು ಎಂದು ಪ್ರಶ್ನೆಯಿಟ್ಟಾಗ ಗಣಪತಿ ದೇವರಿಗೆ ಛಾವಣಿ ಮಾಡುವಂತಿಲ್ಲ ಎನ್ನಲಾಯಿತು. ಇದರಿಂದ ಹೊರಕ್ಕೆ ಮಂದಿರ ನಿರ್ಮಿಸಿದರೂ ಗರ್ಭಗುಡಿಗೆ ಛಾವಣಿ ಮಾಡದೆ ಬಯಲು ಮಾಡಲಾಯಿತು. ಉದ್ಯಮಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿಯವರ ಮುಂದಾಳತ್ವದಲ್ಲಿ ಈಗ ಸಂಕಷ್ಟಿ, ಚತುರ್ಥಿ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.
ದೇವಸ್ಥಾನ ಪುರಾತನವಾದರೂ ಗುಡ್ಡದ ಮೇಲಿರುವುದರಿಂದ ಪ್ರಸಿದ್ಧಿಗೆ ಬಂದಿಲ್ಲ. ಕಳೆದ ವರ್ಷವಷ್ಟೇ ಬ್ರಹ್ಮಕಲಶವಾಗಿದ್ದು, ಹೊರಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ಚೌತಿಗೆ ಅಕ್ಕಿ ಮುಡಿ ಕಡುಬು ಗಣೇಶನಿಗೆ ಬಹಳ ಪ್ರಿಯವಾದುದು.
ಒಟ್ಟಾರೆಯಾಗಿ, ಕೊಡ್ಲಾಡಿಯ ಗುಡ್ಡೆಯಲ್ಲಿರುವ ಬಯಲು ಗಣಪತಿ, ಸೌತೆಡ್ಕ ಗಣಪತಿಯ ಬಳಿಕ ಎರಡನೇ ಸ್ಥಾನ ಪಡೆದಿದ್ದು, ರಾಜ್ಯದ ಪ್ರವಾಸೀ ತಾಣವಾಗುವುದರಲ್ಲಿ ಅನುಮಾನವಿಲ್ಲ.