ನಿವೃತ್ತ ಹಿರಿಯ ಶಿಕ್ಷಕ ಕೃಷ್ಣಯ್ಯ ಭಟ್ ದಂಪತಿಗೆ ಸನ್ಮಾನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎಲ್ಲಾ ಕ್ಷೇತ್ರಗಳಲ್ಲೂ ದಕ್ಷಿಣ ಕನ್ನಡಿಗರು ಪ್ರಾಮಾಣಿಕರು ಎಂಬ ಒಳ್ಳೆಯ ಅಭಿಪ್ರಾಯ ಇದ್ದಿತ್ತು. ಈಗ ಅದು ಮಸುಕಾಗಿದೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಸಮಾಜದಲ್ಲಿ ಗೌರವದ ಸ್ಥಾನ ಹೊಂದಿರುವ ಶಿಕ್ಷಕ ವೃಂದದವರಲ್ಲಿ ಕೂಡಾ ಕೆಲವರು ಇಂದು ಅನೈತಿಕತೆಯ ದಾರಿ ತುಳಿದು ಶಿಕ್ಷಕರ ಘನತೆಯನ್ನು ಕುಂದಿಸುತ್ತಿದ್ದಾರೆ. ಆದರೆ, ತಮ್ಮ ಗುರುಗಳನ್ನು ಗುರುತಿಸಿ, ಗೌರವಿಸುವ ಶಿಷ್ಯ ವೃಂದದವರು ಇಂದಿಗೂ ಕಡಿಮೆಯಾಗಿಲ್ಲ. ಇದು ಶಿಕ್ಷಕರಿಗೆ ಸಲ್ಲುವ ಬಹುದೊಡ್ಡ ಗೌರವ – ಎಂದು ನಿವೃತ್ತ ಶಿಕ್ಷಕ 88ರ ಹರೆಯದ ಬೀಜಾಡಿ ಕೃಷ್ಣಯ್ಯ ಭಟ್ ಹೇಳಿದರು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ದ್ರಾವಿಡ ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯದ ವತಿಯಿಂದ ಹಿರಿಯ ಶಿಕ್ಷಕರಿಗೆ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಬೀಜಾಡಿಯ ಶಿಕ್ಷಕ ಕೃಷ್ಣಯ್ಯ ಭಟ್ಟರ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್, ಹಿರಿಯ ಸದಸ್ಯರಿಂದೊಡಗೂಡಿ ಕೃಷ್ಣಯ್ಯ ಭಟ್ ಮತ್ತು ವಾರಿಜಾಕ್ಷಿ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು. ಇಳಿ ಹರೆಯದಲ್ಲೂ ಚಟುವಟಿಕೆಯಿಂದಿದ್ದು ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿರುವ ಭಟ್ಟರನ್ನು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಆಶೀರ್ವಾದ ಪಡೆಯುವ ಸಂದರ್ಭ ಒದಗಿರುವುದು ನಮ್ಮ ಭಾಗ್ಯ. ಬ್ರಾಹ್ಮಣ ಪರಿಷತ್ತಿನ ಕೋಟೇಶ್ವರ ವಲಯವು ಮುಂಬರುವ ದಿನಗಳಲ್ಲಿ ಇನ್ನಷ್ಟು ರಚನಾತ್ಮಕವಾದ ಕೆಲಸಗಳನ್ನು ನಡೆಸುವ ಯೋಜನೆ ಹೊಂದಿದೆ ಎಂದು ವಾದಿರಾಜ ಹೆಬ್ಬಾರ್ ಹೇಳಿದರು.
ಕೃತಜ್ಞತೆಯ ನುಡಿಗಳನ್ನಾಡಿದ ಶಿಕ್ಷಕ ಕೃಷ್ಣಯ್ಯ ಭಟ್, ಆನಂದಪುರ, ಬೇಲೂರು, ಬಿದ್ಕಲ್ಕಟ್ಟೆ, ಕೋಟೇಶ್ವರ ಮುಂತಾದ ಕಡೆಗಳಲ್ಲಿನ ತಮ್ಮ ಸೇವಾ ಅನುಭವಗಳನ್ನು ಮೆಲುಕು ಹಾಕಿದರು. ಭಾವೋದ್ರೇಕಕ್ಕೊಳಗಾಗಿ ಗದ್ಗದಿತರಾದ ಅವರು, ತುಂಬು ಮನದಿಂದ ಆಶೀರ್ವದಿಸಿದರು.
ಭಾಗ್ಯಲಕ್ಷ್ಮೀ ಧನ್ಯ ವಾರಿಜಾಕ್ಷಿಯಮ್ಮನವರಿಗೆ ಅರಿಶಿನ – ಕುಂಕುಮ, ಮಂಗಳ ದೃವ್ಯಗಳನ್ನು ನೀಡಿ ಗೌರವಿಸಿದರು.
ಪರಿಷತ್ ನ ಮುಖವಾಣಿ ‘ವಿಪ್ರವಾಣಿ’ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ, ಸೀತಾರಾಮ ಧನ್ಯ, ಮಾತನಾಡಿದರು.
ಗೌರವಾಧ್ಯಕ್ಷ ಗಣಪಯ್ಯ ಚಡಗ ಸನ್ಮಾನ ಪತ್ರವನ್ನು ವಾಚಿಸಿದರು. ಚಂದ್ರಿಕಾ ಅಡಿಗ ಪ್ರಾರ್ಥಿಸಿದರು. ಪೂರ್ವಾಧ್ಯಕ್ಷ ವಾದಿರಾಜ ಅಡಿಗ ಸ್ವಾಗತಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್, ಪರಿಷತ್ ಸದಸ್ಯರು, ಭಟ್ಟರ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಕೆ. ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ, ವೆಂಕಟೇಶ ಅರಸ್ ವಂದಿಸಿದರು.