ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ನಡೆಯಿತು.
ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ ವತಿಯಿಂದ ಸರಳವಾಗಿ ವಿವಾಹ ನಡೆಯಿತು. ಒಟ್ಟು ನಾಲ್ಕು ಜೋಡಿ ನವ ದಂಪತಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಪದಾರ್ಪಣೆ ಮಾಡಿದರು.
ಸರಕಾರದ ವತಿಯಿಂದ ವರನಿಗೆ ಐದು ಸಾವಿರ ರೂ. ಮತ್ತು ವಧುವಿಗೆ 10 ಸಾವಿರ ರೂ., ಚಿನ್ನದ ತಾಳಿಯನ್ನು ನೀಡಲಾಯಿತು. ಕೊಲ್ಲೂರು ದೇವಳದ ವತಿಯಿಂದ ವಧುವಿಗೆ ಸೀರೆ, ವರನಿಗೆ ಪಂಚೆ ಮತ್ತು ಕೊಲ್ಲೂರು ದೇವಿಯ ಪೋಟೊವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ರವಿಶಂಕರ್ ಗುರೂಜಿ ಆಗಮಿಸಿ ವಧು ವರರನ್ನು ಆಶೀರ್ವದಿಸಿದರು.
ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿವಾಹವಾಗುವುದು ಯೋಗ. ಈ ಕ್ಷೇತ್ರದಲ್ಲಿ ವಿವಾಹವಾಗಲು ದೇವಿಯ ಅನುಗ್ರಹ ಬೇಕು. ವಿವಾಹಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ದೇವಾಲಯದ ಶಾಸ್ತ್ರೋಕ್ತವಾಗಿ ಸರಳ ವಿವಾಹವಾಗುವುದು ಉತ್ತಮ ಎಂದರು.
ಕ್ಷೇತ್ರ ಪುರೋಹಿತರಾದ ಗಜಾನನ ಜೋಶಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಳದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿಯವರು ಉಪಸ್ಥಿತರಿದ್ದರು.
