ಡಾ.ಜಿ ಶಂಕರ್ 67ನೇ ಜನುಮದಿನೋತ್ಸವ ಅಂಗವಾಗಿ ಸನ್ಮಾನ ಕಾರ್ಯಕ್ರಮ ಆಯೋಜನೆ
ಕುಂದಾಪುರ ಮಿರರ್ ಸುದ್ದಿ…
ಕೋಟ: ಆಶಾ ಕಾರ್ಯಕರ್ತೆಯರು ಜನಸಾಮಾನ್ಯರ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆ ಶ್ಲಾಘನೀಯ ಎಂದು ಕೋಟ ಮೊಗವೀರ ಯುವ ಸಂಘಟನೆಯ ಸ್ಥಾಪಕಾಧ್ಯಕ್ಷ ಎಂ.ಎಸ್ ಸಂಜೀವ ಹೇಳಿದ್ದಾರೆ.
ಕೋಟ ಮೊಗವೀರ ಯುವ ಸಂಘ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ ನಾಡೋಜ ಡಾ. ಜಿ.ಶಂಕರ್ 67ನೇ ಜನ್ಮದಿನೋತ್ಸವದ ಅಂಗವಾಗಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಸೇರಿದಂತೆ ಆಶಾಕಾರ್ಯಕರ್ತೆಯರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆಶಾಕಾರ್ಯಕರ್ತರ ಸೇವೆ ನಿಜಕ್ಕೂ ಶ್ಲಾಘನೀಯ. ತನ್ನ ಜೀವದ ಹಂಗು ತೊರೆದು ಸೇವಾ ಕಾರ್ಯ ನೀಡುತ್ತಿರುವುದು ಮಾದರಿ ಕಾರ್ಯಗಳಲ್ಲೊಂದಾಗಿದೆ. ಇಂತಹ ಒಳ್ಳೆಯ ಕಾರ್ಯಕ್ಕೆ ನಾಡೋಜ ಡಾ. ಜಿ ಶಂಕರ್ ತನ್ನ ಹುಟ್ಟು ಹಬ್ಬವನ್ನು ಅರ್ಪಣೆಗೊಳಿಸಿಕೊಂಡಿದ್ದಾರೆ ಎಂದು ಆಶಯ ವ್ಯಕ್ತಪಡಿಸಿ ಶುಭಾಶಯ ಕೊರಿದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ ಸೇರಿದಂತೆ ಕೋಟ ವ್ಯಾಪ್ತಿಯ 15ಜನ ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಕೋಟ ಮೊಗವೀರ ಯುವ ಘಟಕದ ಅಧ್ಯಕ್ಷ ಜಯಂತ್ ಅಮೀನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಿವರಾಮ ಕೆ.ಎಂ,ಕೋಟ ಘಟಕದ ಮಾಜಿ ಅಧ್ಯಕ್ಷ ರಮೇಶ್ ವಿ ಕುಂದರ್,ನಿಯೋಜಿತ ಅಧ್ಯಕ್ಷ ರಂಜೀತ್ ಕುಮಾರ್, ನಿಯೋಜಿತ ಮಹಿಳಾ ಅಧ್ಯಕ್ಷ ಲಲಿತಾ ಭಾಸ್ಕರ್,ಮಾಜಿ ಅಧ್ಯಕ್ಷರುಗಳಾದ ಗೀತಾ ಆರ್ ಸುವರ್ಣ,ಸುಜಾತ ಗೋಪಾಲ, ಸಂಘಟನೆಯ ಪ್ರಮುಖರಾದ ದೇವದಾಸ್ ಕಾಂಚನ್,ಅಶೋಕ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಸುರೇಶ್ ಮರಕಾಲ ನಿರೂಪಿಸಿದರು.