ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಳ್ಳಿಗಳಿಂದ ಉದ್ಯೋಗಕ್ಕಾಗಿ ದೂರದೂರುಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಿ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಿದಾಗ ಗ್ರಾಮ ಸ್ವರಾಜ್ಯ ಕನಸು ನನಸಾಗುವುದು ಎಂದು ಸುಮುಖ ಗ್ರೂಪ್ ಆಫ್ ಇಂಡಸ್ಟ್ರೀಸ್, ಉಪ್ಪುಂದ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್. ಸುರೇಶ್ ಶೆಟ್ಟಿ ಹೇಳಿದರು.
ಅವರು ಸುಮುಖ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಅಂಗ ಸಂಸ್ಥೆ ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈ. ಲಿ.ನ ದಶಮಾನೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹತ್ತು ವರ್ಷಗಳ ಅವಧಿಯಲ್ಲಿ ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸುತ್ತಾ, ನಗರಗಳಲ್ಲಿರುವ ಉದ್ಯಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೃಷ್ಟಿಸಿ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಒದಗಿಸಿದಾಗ ವಲಸೆ ತಡೆಗಟ್ಟುವುದು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ವಾದಿರಾಜ್ ಶೆಟ್ಟಿ, ಮಾಲಕ ಮತ್ತು ನೌಕರರ ನಡುವೆ ನಂಬಿಕೆ, ವಿಶ್ವಾಸ ಮತ್ತು ಪರಸ್ಪರ ಗೌರವಗಳಿದ್ದಾಗ ಯಾವುದೇ ಉದ್ಯಮ ಯಶಸ್ಸು ಸಾಧಿಸುತ್ತದೆ ಎಂದರು. ಕಾಂiiಕ್ರಮದ ಮುಖ್ಯ ಅತಿಥಿ, ಸಂಸ್ಥೆಯ ನಿರ್ದೇಶಕ ಯು. ಪಾಂಡುರಂಗ ಪಡಿಯಾರ್ ಮಾತನಾಡಿ, ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಸಂಸ್ಥೆಯ ಮುಖ್ಯ ಗುರಿ ಎಂದರು.
ಈ ಸಂದರ್ಭ ಸಂಸ್ಥೆಯ ಆರಂಭದಿಂದ ಇದ್ದ ಉದ್ಯೋಗಿಗಳಾದ ಚಂದ್ರಶೇಖರ ದೇವಾಡಿಗ, ನಾಗರತ್ನ ದೇವಾಡಿಗ ಹಾಗೂ ಭಾರತಿಯವರನ್ನು ಗೌರವಿಸಲಾಯಿತು. ದಶಮಾನೋತ್ಸವ ಪ್ರಯುಕ್ತ ನಡೆಸಲಾದ ವಿವಿಧ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಬಗ್ಗೆ ಹಾಡು ಬರೆದು ಸಂಗೀತ ಸಂಯೋಜಿಸಿದ ಸಂಸ್ಥೆಯ ಉದ್ಯೋಗಿ ಶರತ್ ಶೆಟ್ಟಿ ಬಿಜೂರು ಇವರನ್ನು ಸನ್ಮಾನಿಸಲಾಯಿತು. ನಿರ್ದೇಶಕಿ ಶಮ್ಮಿ ಎಸ್ ಶೆಟ್ಟಿ, ಪದ್ಮಾವತಿ ಪಡಿಯಾರ್ ಉಪಸ್ಥಿತರಿದ್ದರು.
ಬಳಿಕ ಭರತನಾಟ್ಯ ಕಲಾವಿದೆ ಕು. ಪ್ರಾಪ್ತಿ ಮಡಪ್ಪಾಡಿಯವರಿಂದ ಭರತನಾಟ್ಯ, ರವೀಂದ್ರ ಪ್ರಭು ಮುಲ್ಕಿ ಹಾಗೂ ರಶ್ಮಿ ನಾರಾವಿಯವರಿಂದ ಸಂಗೀತ ರಸಮಂಜರಿ ಮತ್ತು ಸಂಸ್ಥೆಯ ಉದ್ಯೋಗಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಡ್ಕ್ರೀಟ್ ಸಂಸ್ಥೆಯ ಉದ್ಯೋಗಿ ಭಾಗ್ಯಶ್ರೀ ಸ್ವಾಗತಿಸಿ, ವಂದಿಸಿದರು. ಸುಮುಖ ಗ್ರೂಪ್ನ ಹೆಚ್. ಆರ್. ಮ್ಯಾನೇಜರ್ ಜಯಶೇಖರ್ ಮಡಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.