ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸುಣ್ಣಾರಿಯ ಎಕ್ಸಲೆಂಟ್ ಪ.ಪೂ. ಕಾಲೇಜಿನಲ್ಲಿ ಪ.ಪೂ. ಶಿಕ್ಷಣ ಇಲಾಖೆ, ಸುಣ್ಣಾರಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಹಾಗೂ ಎಕ್ಸಲೆಂಟ್ ಪ.ಪೂ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಪ.ಪೂ. ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ.ಪೂ. ಕಾಲೇಜುಗಳ ತಂಡಗಳರೆಡು ಸೆಮಿಫೈನಲಿಗೆ ಪ್ರವೇಶಿಸಿದೆ.
ಸೆಮಿಫೈನಲ್ ನಲ್ಲಿ ಉಡುಪಿಯ ಬಾಲಕಿಯರ ತಂಡವು ವಿಜಯನಗರ ತಂಡವನ್ನು, ದ.ಕ. ತಂಡವು ಮೈಸೂರು ತಂಡವನ್ನು ಎದುರಿಸಲಿದೆ.
ಬಾಲಕರ ವಿಭಾಗ : ಉಡುಪಿ, ದ.ಕ. ಕ್ವಾರ್ಟರ್ ಗೆ
ಬಾಲಕರ ವಿಭಾಗದಲ್ಲಿ ಉಡುಪಿ ಹಾಗೂ ದ.ಕ. ತಂಡಗಳೆರಡು ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದು, ಇದರೊಂದಿಗೆ ಚಿಕ್ಕಮಗಳೂರು, ಉತ್ತರ ಕನ್ನಡ, ಚಾಮರಾಜನಗರ, ಗದಗ, ತುಮಕೂರು ಹಾಗೂ ಮೈಸೂರು ಜಿಲ್ಲೆಗಳ ಪ.ಪೂ. ಕಾಲೇಜಿನ ತಂಡಗಳು ಕ್ವಾರ್ಟರ್ ಫೈನಲಿಗೆ ಹೆಜ್ಜೆಯಿರಿಸಿದೆ.
ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ 33 ಜಿಲ್ಲಾ ತಂಡಗಳು ಹಾಗೂ ಬಾಲಕಿಯರ ವಿಭಾಗದಲ್ಲಿ 32 ತಂಡಗಳ 750 ಕ್ಕೂ ಮಿಕ್ಕಿ ಆಟಗಾರರು ಪಾಲ್ಗೊಂಡಿದ್ದರು. ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾಟಗಳು ಡಿ. 10 ರಂದು ನಡೆಯಲಿದೆ.
ಗಮನಸೆಳೆದ ಕುಟ್ಟಪ್ಪ
ಅಪಘಾತದಲ್ಲಿ ಕಾಲು ಕಳೆದುಕೊಂಡ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಆಟಗಾರ ಕುಟ್ಟಪ್ಪ ಅವರು ಕೃತಕ ಕಾಲಿನೊಂದಿಗೆ ಅದ್ಭುತ ಆಟ ಪ್ರದರ್ಶಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕುಟ್ಟಪ್ಪ ಅವರನ್ನು ಸುಜ್ನಾನ್ ಎಜುಕೇಷನ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.
ಅಚ್ಚುಕಟ್ಟು ವ್ಯವಸ್ಥೆ : ಮೆಚ್ಚುಗೆ
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಸುಣ್ಣಾರಿ ಪ.ಪೂ. ಶಿಕ್ಷಣ ಸಂಸ್ಥೆಯು ಊಟೋಪಚಾರ, ವಸತಿ, ಸ್ವಚ್ಚತೆ, ಆಯೋಜನೆ ಸಹಿತ ಸಕಲ ವ್ಯವಸ್ಥೆಯೊಂದಿಗೆ ಅಚ್ಚುಕಟ್ಟುತನ ಮೆರೆದಿದ್ದರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ವಿದ್ಯಾರ್ಥಿಗಳು, ತರಬೇತುದಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ತೀರ್ಪುಗಾರರಾಗಿ ಉಡುಪಿ ಜಿಲ್ಲಾ ಪ.ಪೂ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ ಹಾಗೂ ತೀರ್ಪುಗಾರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಎಕ್ಸಲೆಂಟ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ, ಸುಜ್ನಾನ್ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಉಪನ್ಯಾಸಕ ವೃಂದ, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.