ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಘಟನೆಯ ಕಾರ್ಯಕರ್ತನ ಕುಟಂಬಕ್ಕೆ 11ನೇ ಮನೆ ಹಸ್ತಾಂತರ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಜ್ಞಾನಕ್ಕೆ ಭಾಷೆಯ ಅಡ್ಡಿ ಬರುದಿಲ್ಲ. ಧರ್ಮ ಮತ್ತು ಜ್ಞಾನದ ಬಗ್ಗೆ ಅರಿವು ಇದ್ದರೆ ಸಮಾಜದಲ್ಲಿ ಬದಲಾವಣೆ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಭಗವಂತ ಎಂದರೆ ಸಮಾನತೆ. ಸನಾತನ ಧರ್ಮ ಎಲ್ಲ ಧರ್ಮಕ್ಕಿಂತ ಅತ್ಯಂತ ಶ್ರೇಷ್ಠವಾದುದು. ನಮ್ಮಲ್ಲಿರುವ ಮೇಲು-ಕೀಳು ಎಂಬ ಭಾವನೆ ಹಾಗೂ ಬಡತನ ಮತ ಅಂತರಗಳಿಗೆ ಮುಖ್ಯ ಕಾರಣ. ನಮ್ಮಲ್ಲಿರುವ ತೊಡಕುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ನೈತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಹಿಂದು ಕಾರ್ಯಕರ್ತರನ್ನು ಗಟ್ಟಿಗೊಳಿಸಿ ಅವರಲ್ಲಿ ಭರವಸೆ ತುಂಬುವ ಕಾರ್ಯ ನಡೆಯಬೇಕಿದೆ. ಇಂತದೊಂದು ಪರಿವರ್ತನೆ ಸಮಾಜದಲ್ಲಿ ಆಗಬೇಕಿದೆ ಎಂದು ಗೌರಿಗದ್ದೆಯ ಶ್ರೀ ಅವಧೂತ ಶ್ರೀ ವಿನಯ್ ಗುರುಜೀ ಹೇಳಿದರು.
ಡಾ.ಗೋವಿಂದ ಬಾಬು ಪೂಜಾರಿ ಅವರ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಮರವಂತೆ ಗ್ರಾಮದ ಹಿಂದು ಸಂಘಟನೆ ಕಾರ್ಯಕರ್ತ ರಾಜು ಮರವಂತೆ ಅವರಿಗೆ ನಿರ್ಮಿಸಿಕೊಡಲಾದ ‘ಶ್ರೀ ವರಲಕ್ಷ್ಮೀ ನಿಲಯ’ದ 11ನೇ ಮನೆ ಪ್ರವೇಶೋತ್ಸವ ಸಮಾರಂಭದಲ್ಲಿ ಮನೆಯನ್ನು ರಾಜು ಮರವಂತೆ ಅವರಿಗೆ ಗುರುವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೀಗೂ ಬದುಕುಬಹುದು ಎಂಬುದನ್ನು ತೋರಿಸಿಕೊಟ್ಟಿರುವ ಡಾ.ಗೋವಿಂದ ಬಾಬು ಪೂಜಾರಿ, ಸಂಕಷ್ಟದಲ್ಲಿರುವ ಹಿಂದು ಸಂಘಟನೆಯ ಕಾರ್ಯಕರ್ತನಿಗೆ ಮನೆ ನಿರ್ಮಿಸಿಕೊಡುವ ಮೂಲಕ ಆ ಕುಟುಂಬದಲ್ಲಿ ಆತ್ಮಸ್ಥೈರ್ಯ ತುಂಬಿ ಇತರರಿಗೆ ಪ್ರೇರಣೆಯಾಗಿದ್ದಾರೆ. ಸಮಾಜದಲ್ಲಿ ವ್ಯಕ್ತಿ ಬೆಳೆದಾದ ಆಪಾದನೆಗಳು, ಆರೋಪಗಳು ಬರುವುದು ಸಹಜ. ಆದರೆ ಇವೆಲ್ಲವನ್ನು ಮೆಟ್ಟಿ ನಿಂತು ಇನ್ನಷ್ಟು ಸಾಧನೆಗಳನ್ನು ಮಾಡಿ ತೋರಿಸುವುದು ನಮ್ಮ ಗುರಿಯಾಗಬೇಕು ಎಂದು ಅವರು ಹೇಳಿದರು.
ಆಶೀರ್ವಚನ ನೀಡಿ ಮಾತನಾಡಿದ ಶ್ರೀ ಅಭಿನವ ಹಾಲಾಶ್ರೀ ಸ್ವಾಮೀಜಿಯವರು, ಮನುಷ್ಯನ ಸರಳತೆ ಮನುಷ್ಯನನ್ನು ಸಮಾಜದಲ್ಲಿ ಬೆಳೆಸುತ್ತದೆ. ದಾನ, ಧರ್ಮದ ಕಲ್ಪನೆಗಳನ್ನು ಬೆಳೆಸಿಕೊಂಡು, ನಿಂದನೆಗಳನ್ನು ಸ್ವೀಕಾರ ಮಾಡಿ, ಮಾಡುವ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಟ ಮಾಡಿ ಹಗಲಿರುಳು ದುಡಿಯುತ್ತಿರುವ ಹಿಂದು ಸಂಘಟನೆಯ ಕಾರ್ಯಕರ್ತರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಿ ಸಹಾಯ ಮಾಡುತ್ತಿರುವ ಡಾ.ಗೋವಿಂದ ಬಾಬು ಪೂಜಾರಿ ಅವರ ಕಾರ್ಯ ಶ್ಲಾಘನೀಯ ಎಂದರು.
ವಿಶ್ವ ಹಿಂದು ಪರಿಷತ್ನ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಪ್ರಕಾಶ ಕುಕ್ಕೆಹಳ್ಳಿ, ವಾಗ್ಮಿ ಚೈತ್ರಾ ಕುಂದಾಪುರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘ ಚಾಲಕ ನಾರಾಯಣ ಶೆಣೈ ಶುಭಾಶಂಸನೆಗೈದರು. ಇದೇ ಸಂದರ್ಭ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಮರವಂತೆ ಘಟಕದ ವತಿಯಿಂದ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಸುಬ್ರಹ್ಮಣ್ಯ ಜಿ. ಬಿಜೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.